ಗೆಜ್ಜೆ ಕಟ್ಟಲು ಸಿದ್ಧರಾಗಿದ್ದಾರೆ 210 ವಿದ್ಯಾರ್ಥಿಗಳು
ಲೇಖಕರು : ವಿಲಾಸ್ ಕುಮಾರ್ ನಿಟ್ಟೆ, ಕಾರ್ಕಳ
ಭಾನುವಾರ, ಫೆಬ್ರವರಿ 2 , 2014
|
ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನಿಟ್ಟುಕೊಂಡು ಚಿಕ್ಕದೊಂದು ಅಳಿಲ ಸೇವೆಗೆ ಮುಂದಾಗಿದೆ ಕಾರ್ಕಳದ ಯಕ್ಷ ಕಲಾರಂಗ. ಒಂದೂವರೆ ವರ್ಷದ ಹಿಂದೆ ಹುಟ್ಟಿಕೊಂಡ ಈ ಸಂಸ್ಥೆಯು ಮಕ್ಕಳಲ್ಲಿ ಅಭಿರುಚಿಯನ್ನು ಮೂಡಿಸುವ ಪ್ರಯತ್ನಕ್ಕೆ ಕೆಹಾಕಿದೆ. ಪರಿಣಾಮ ಇದೀಗ 210 ಬಾಲ ಕಲಾವಿದರು ಗೆಜ್ಜೆಕಟ್ಟಿ ಕುಣಿಯಲು ಸಜ್ಜಾಗಿದ್ದಾರೆ.
ಸರ್ವಾಂಗ ಸುಂದರ ಯಕ್ಷಗಾನ ಕಲೆಯ ಪೋಷಣೆಗಾಗಿ, ಆಟ ಕೂಟಗಳ ಆಯೋಜನೆಗಾಗಿ, ನಾಟ್ಯ ನಟನೆಗಳ ತರಬೇತಿಗಾಗಿ, ಹಿರಿ-ಕಿರಿಯ ಕಲಾವಿದರನ್ನು ಗೌರವಿಸುವುದಕ್ಕಾಗಿ, ರಸಿಕ ಜನ ಸಮುದಾಯದ ಸ್ವಾಸ್ಥ್ಯ ಸಂರಕ್ಷಣೆಗಾಗಿ, ನಾಡಿನ ಹೆಮ್ಮೆಯ ಕಲೆಯ ಪ್ರಭೋದನಾತ್ಮಕ ಕಾರ್ಯಕ್ರಮ ಸಂಘಟನೆಯೇ ಯಕ್ಷ ಕಲಾರಂಗ ಕಾರ್ಕಳ. ಈ ಸಂಸ್ಥೆಯ ಮೂಲಕ ಈ ವಿನೂತನ ಪ್ರಯೋಗ ನಡೆದಿದೆ.
ಯಕ್ಷಗಾನದ ಹಿರಿಯ ಹಾಗೂ ಹವ್ಯಾಸಿ ಕಲಾವಿದರು ಇದರ ಪ್ರೇರಕರು, ಮಾರ್ಗದರ್ಶನಕರು ಹಾಗೂ ಗುರುಗಳಾಗಿದ್ದಾರೆ. ಸೇವೆಯ ರೂಪದಲ್ಲಿ ಯಕ್ಷಗಾನ ತರಬೇತಿ ನೀಡುತ್ತಿದ್ದು, ಚಿಣ್ಣರಲ್ಲಿ ಬಾಲ್ಯದಿಂದಲೇ ಯಕ್ಷಗಾನದ ಕಲಾಭಿರುಚಿಯನ್ನು ತುಂಬುತ್ತಿದ್ದಾರೆ. ಕಾರ್ಕಳ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳನ್ನು ಸಂಪರ್ಕಿಸಿ, ಅಲ್ಲಿಯ ಆಸಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಯಕ್ಷಗಾನದ ಹೆಜ್ಜೆ ಕಲಿಸಿ ಕೊಡುತ್ತಿದ್ದಾರೆ. ಯಕ್ಷಗಾನ ಪ್ರೋತ್ಸಾಹಕರು ಹಾಗೂ ದಾನಿಗಳ ಸಹಕಾರದಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ: ಯಕ್ಷಗಾನವನ್ನು ಕಲಿತ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಕೂಡಾ ನಡೆಸಲಾಗುತ್ತಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸಿಕೊಡುವ ಕೆಲಸ ಕೂಡಾ ಆಗುತ್ತಿದೆ.
ಕಳೆದ ಸಾಲಿನ ಏ.21, 22ರಂದು ಪೆರ್ವಾಜೆ ಶ್ರೀ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲೆಯಲ್ಲಿ ಚಿಣ್ಣರ ಯಕ್ಷೋತ್ಸವ ನಡೆದಿತ್ತು. ಹತ್ತು ಶಾಲೆಗಳ ಪೆಕಿ ಆರು ಶಾಲೆಗಳ ಒಟ್ಟು 120 ವಿದ್ಯಾರ್ಥಿಗಳು ಎರಡು ದಿನಗಳ ಕಾಲ ತಲಾ ಎರಡು ಗಂಟೆ ಅವಧಿಯಂತೆ ಹಲವು ಪ್ರಸಂಗವನ್ನು ಪ್ರದರ್ಶಿಸಿದರು. ಇದೀಗ ಪ್ರಸಕ್ತ ಸಾಲಿನಲ್ಲಿ ಕೂಡಾ ಆಸಕ್ತ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನಾಟ್ಯ ಶಿಕ್ಷಣ ತರಗತಿ ನಡೆಸಿ ಕಲಾ ಬೆಳವಣಿಗೆ ಮಕ್ಕಳನ್ನು ತೊಡಗಿಸಿಕೊಳ್ಳಬೇಕೆಂದು ಸಂಸ್ಥೆ ತೀರ್ಮಾನಿಸಿದೆ.
ಕಾರ್ಕಳ ತಾಲೂಕಿನ ಹತ್ತು ಶಾಲೆ-ಕಾಲೇಜುಗಳಲ್ಲಿ ಅನೇಕ ಗುರುಗಳಿಂದ ಕಳೆದ ಜುಲೈ ತಿಂಗಳಿಂದ ತರಬೇತಿ ತರಗತಿಗಳನ್ನು ನಡೆಸಿದೆ. ಇದೀಗ ಫೆ.1ರಿಂದ ಪೆರ್ವಾಜೆ ಶಾಲೆಯಲ್ಲಿ ಚಿಣ್ಣರ ಯಕ್ಷೋತ್ಸವ ನಡೆಯಲಿದ್ದು, ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ನಡೆಯುವ ಈ ಕಾರ್ಯಕ್ರಮದ ಸಹಯೋಗವನ್ನು ಇತರ ದಾನಿಗಳ ಜತೆಗೆ ಶಾಸಕ ವಿ.ಸುನಿಲ್ ಕುಮಾರ್ ಅವರು ತನ್ನ ವಿಕಾಸ ಸಂಸ್ಥೆಯ ಮೂಲಕ ವಹಿಸಿಕೊಂಡಿದ್ದಾರೆ.
ಪ್ರದರ್ಶನ: ಒಟ್ಟು 10 ಶಾಲೆಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿವೆ. ಪೆರ್ವಾಜೆಯಲ್ಲಿ ನೆಡೆಯಲಿರುವ ಈ ಕಿಶೋರ ಯಕ್ಷೋತ್ಸವದಲ್ಲಿ ಸಾಣೂರು ಮುದ್ದಣ್ಣನಗರ ಸರಕಾರಿ ಕಿ.ಪ್ರಾ. ಶಾಲಾ ಮಕ್ಕಳಿಂದ 'ವೀರಭಾರ್ಗವ', ಎಣ್ಣೆಹೊಳೆ ರಾಧಾನಾಯಕ್ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ 'ರಾಮಾಶ್ವಮೇಧ', ಮಾಳ ಚೌಕಿಯಂಗಡಿ ಸರಕಾರಿ ಹಿ.ಪ್ರಾ. ಶಾಲೆ ಮಕ್ಕಳಿಂದ 'ಗುರುದಕ್ಷಿಣೆ', ಪೆರ್ವಾಜೆ ಸರಕಾರಿ ಹಿ.ಪ್ರಾ. ಶಾಲೆ ಮಕ್ಕಳಿಂದ 'ವೀರ ವತ್ಸಾಖ್ಯ', ನಾಗೋಳಿ ಶ್ರೀ ರವಿಶಂಕರ ವಿದ್ಯಾಮಂದಿರ ವಿದ್ಯಾರ್ಥಿಗಳಿಂದ 'ಲವ ಕುಶ', ಬಂಗ್ಲೆಗುಡ್ಡೆ ಸದ್ಭಾವನಾನಗರ ಸರಕಾರಿ ಹಿ.ಪ್ರಾ. ಶಾಲಾ ಮಕ್ಕಳಿಂದ 'ಶ್ರೀ ಹರಿದರ್ಶನ', ಮಾಳ ಗುರುಕುಲ ಅನುದಾನಿತ ಹಿ.ಪ್ರಾ. ಶಾಲೆ ವಿದ್ಯಾರ್ಥಿಗಳಿಂದ 'ಭಕ್ತ ಮಾರ್ಕಾಂಡೇಯ', ಕಾಂತಾವರ ಅನುದಾನಿತ ಹಿ.ಪ್ರಾ. ಶಾಲೆ ಮಕ್ಕಳಿಂದ 'ಸುದರ್ಶನ ವಿಜಯ', ಪೆರ್ವಾಜೆ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ 'ಭೀಷ್ಮ ವಿಜಯ', ಕಾಬೆಟ್ಟು ಬಿ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ 'ದಕ್ಷಯಜ್ಞ' ಯಕ್ಷಗಾನ ಪ್ರದರ್ಶನ ನಡೆಯಲಿದೆ. ಗುರುಗಳಾಗಿ ಗಣೇಶ್ ಶೆಟ್ಟಿ ಸಾಣೂರು, ಸತೀಶ್ ಕೆ., ಆನಂದ ಗುಡಿಗಾರ್, ಮಹಾವೀರ ಪಾಂಡಿ, ಧರ್ಮರಾಜ ಕಂಬಳಿ, ಅಜಿತ್ ಕುಮಾರ್ ಜೈನ್ ಸಹಕರಿಸಿದ್ದಾರೆ.
ಇತರ ಮಾಧ್ಯಮಗಳ ಪ್ರಭಾವದಿಂದ ಸಂಸ್ಕೃತಿಯ ಪ್ರತೀತವಾದ ಈ ಕಲೆಯನ್ನು ಎಳೆಯ ಮಕ್ಕಳ ಮನಸ್ಸಿನಲ್ಲೇ ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ ಕಲೆಯನ್ನು ಮಕ್ಕಳಿದ್ದಲ್ಲಿಗೆ ಕೊಂಡೊಯ್ದು ಪರಿಚಯಿಸಿ, ಬಳಿಕ ಈ ಕಲಾ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಮುಖ್ಯ ಉದ್ದೇಶ. ಈಗಾಗಲೇ ಸಿದ್ಧಗೊಂಡ ಈ ಬಾಲ ಕಲಾವಿದರಿಂದ ಅದೆಷ್ಟೋ ಕಲಾವಿದರ ಸೃಷ್ಟಿಯ ಜತೆಗೆ ಕಲಾಸಕ್ತರನ್ನು ಕೂಡಾ ಸೃಷ್ಟಿಸುವ ಕೆಲಸವಾಗುತ್ತದೆ. - ಮಹಾವೀರ ಪಾಂಡಿ ಕಾಂತಾವರ , ಯಕ್ಷಗಾನ ಕಲಾವಿದ ಹಾಗೂ ಗುರು
ಕೃಪೆ :
http://www.vijaykarnataka.com
|
|
|